ರಾಜ್ಯ ಮಟ್ಟದ ‘ಪರಿಸರ ರತ್ನ ಪ್ರಶಸ್ತಿ’ಗೆ ಭಾಜನರಾದ ಪರಿಸರ ಪ್ರೇಮಿ ವಿ. ದಾಸಣ್ಣ
ಮಿಡಿತ ಫೌಂಡೇಶನ್ ವತಿಯಿಂದ ಬೆಂಗಳೂರಿನ ಯಮಲೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ರಾಜ್ಯದ ಪರಿಸರ ಸಂರಕ್ಷಣೆಗಾಗಿ ಶ್ರಮಿಸಿದ ವಿವಿಧ ಸಾಧಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಾವಗಡ ತಾಲ್ಲೂಕಿನ ವಿಶ್ವ ಗ್ರಾಮೋದಯ ಸಂಸ್ಥೆಯ ಸಂಸ್ಥಾಪಕರಾದ ಪರಿಸರ ಪ್ರೇಮಿ ವಿ. ದಾಸಣ್ಣ ಅವರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ ‘ಪರಿಸರ ರತ್ನ ಪ್ರಶಸ್ತಿ’ ಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಮಾತಾ ಮಂಜಮ್ಮ ಜೋಗತಿ ಅವರು ಪ್ರದಾನ ಮಾಡಿ ಸನ್ಮಾನಿಸಿದರು.
ಪರಿಸರ ಸಂರಕ್ಷಣೆ, ಹಸಿರು ಅಭಿಯಾನ, ಗ್ರಾಮೀಣ ಅಭಿವೃದ್ಧಿ, ಜಲ ಸಂರಕ್ಷಣೆ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ವಿ. ದಾಸಣ್ಣ ಅವರು ಸಲ್ಲಿಸಿರುವ ನಿರಂತರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕಳೆದ ಹಲವು ವರ್ಷಗಳಿಂದ ವಿಶ್ವ ಗ್ರಾಮೋದಯ ಸಂಸ್ಥೆಯ ಮೂಲಕ ಸಾವಿರಾರು ಗಿಡಗಳನ್ನು ನೆಡುವುದು, ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಗ್ರಾಮೀಣ ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಿಡಿತ ಫೌಂಡೇಶನ್ನ ಮಂಜುನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಆಶಾ ರೆಡ್ಡಿ, ವಿನೋದ್ ಕರ್ತವ್ಯ, ಖ್ಯಾತ ನಾಟಕಕಾರ ಸಿಂಹಾದ್ರಿ, ನಿರೂಪಕಿ ಲಕ್ಷ್ಮಿ ಬಾಗಲಕೋಟೆ, ವಲಯ ಅರಣ್ಯಾಧಿಕಾರಿಗಳು, ಗ್ರಾಮಸ್ಥರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಈ ಗೌರವವು ವಿ. ದಾಸಣ್ಣ ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲದೆ, ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ಎಲ್ಲ ಪರಿಸರ ಪ್ರೇಮಿಗಳಿಗೆ ಮತ್ತಷ್ಟು ಪ್ರೇರಣೆಯಾಗಿದ್ದು, ಸಮಾಜದಲ್ಲಿ ಹಸಿರು ಸಂರಕ್ಷಣೆಯ ಯುವಶಕ್ತಿಗೆ ಹೊಸ ಉತ್ಸಾಹ ತುಂಬುವಂತಾಗಿದೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
