ಕಳೆದ 20 ದಿನದಿಂದ ಎಪಿಎಂಸಿ ಮುಂದೆ ರೈತರ ಪರಿಸ್ಥಿತಿ ಗಂಭೀರ. ಅಧಿಕಾರಿಗಳ ನಿರ್ಲಕ್ಷ್ಯ.
ಸಿಂಧನೂರು : ಕಳೆದ 20 ದಿನದಿಂದ ನಗರದ ಎಪಿಎಂಸಿ ಮುಂದೆ ರೈತರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ! ರೈತರು ಬೆಳೆದಿರುವ ಭತ್ತವನ್ನು ಖರೀದಿಸುವ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಸಾವಿರಾರು ರೈತರು ಕಂಗಾಲಾಗಿದ್ದಾರೆ, ತಾವು ಬೆಳೆದಿರುವ ಭತ್ತವನ್ನು ಟ್ರಾಕ್ಟರುಗಳಲ್ಲಿ ತುಂಬಿಕೊಂಡು ಎಪಿಎಂಸಿ ಒಳಗಡೆ ಮತ್ತು ಹೊರಗಡೆ ಕುಷ್ಟಗಿ ರಸ್ತೆಯ ಎರಡು ಬದಿಯಲ್ಲಿ ನೂರಾರು ಟ್ರ್ಯಾಕ್ಟರ್ ಗಳು, ಲಾರಿಗಳು ನಿಂತಿರುವುದರಿಂದ ರಸ್ತೆ ಸಂಚಾರ ಅಸ್ತವ್ಯಸ್ತ ಗೊಳ್ಳುತ್ತಿರುವುದು, ಪೊಲೀಸರು ತಹಬದಿಗೆ ತರಲು ಪ್ರಯತ್ನಿಸುತ್ತಿರುವುದು ಕಂಡುಬಂತು.

ರೈತರ ಪರಿಸ್ಥಿತಿ ಅತ್ಯಂತ ದಯನೀಯ ಸ್ಥಿತಿಗೆ ತಲುಪಿದೆ ಎಂದರೆ ಒಬ್ಬ ವ್ಯಾಪಾರಸ್ಥರ ಹೇಳಿಕೆ ಪ್ರಕಾರ ಪ್ರತಿನಿತ್ಯ 15 ರಿಂದ 20 ಸಾವಿರ ಅನ್ಸೋಲ್ಡ ಭತ್ತದ ಚೀಲಗಳು ಎಪಿಎಂಸಿಗೆ ಬರುತ್ತಿವೆ! ರೈತರು ವ್ಯಾಪಾರಸ್ಥರು ಕೇಳಿದ ಬೆಲೆಗೆ ತಮ್ಮ ಭತ್ತವನ್ನು ಬಿಕರಿ ಮಾಡುವ ಮೂಲಕ ತಮ್ಮ ಅಸಹಾಯಕತೆಯನ್ನು ತಾವೇ ದೂರಿಕೊಳ್ಳುವ ಪರಿಸ್ಥಿತಿ ಬಂದಿದೆ.
2022 ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕೃಷಿ ಇಲಾಖೆ ಮಾಡುವ ಕೆಲಸವೇನು? ಮುಂಗಾರು ಮತ್ತು ಹಿಂಗಾರು ಮಳೆ ಪರಿಮಾಣವನ್ನು ಅಂದಾಜು ಮಾಡಿ ಯಾವ ಬೆಳೆ ಎಷ್ಟು ಪ್ರಮಾಣದಲ್ಲಿ ಬಿತ್ತನೆ ಯಾಗಿದೆ ಮತ್ತು ಅಂದಾಜು ಇಳುವರಿ ಪ್ರಮಾಣವನ್ನು ಸರ್ಕಾರಕ್ಕೆ ವರದಿ ಸಲ್ಲಿಸಬೇಕು, ಈ ಕೆಲಸ ಪ್ರಾಮಾಣಿಕವಾಗಿ ಆಗುತ್ತಿಲ್ಲ! ತುಂಗಭದ್ರ ಜಲಾಶಯದಲ್ಲಿ ಈ ಹಿಂಗಾರು ಬೆಳೆಗೆ ಸಾಕಾಗುವಷ್ಟು ಭರಪೂರ ನೀರು ಶೇಖರಣೆ ಯಾಗಿದ್ದು ಸಕತ್ತಾಗಿ ಭತ್ತ ನಾಟಿ ಮಾಡಲಾಗಿದೆ, ಕಾರಣ ದಾಖಲೆ ಪ್ರಮಾಣದಲ್ಲಿ ಲಕ್ಷಾಂತರ ಮೆಟ್ರಿಕ್ ಟನ್ ಭತ್ತ ಇಳುವರಿ ಯಾಗಿದೆ! ಕೇವಲ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಮಾತ್ರ ಅಲ್ಲ ಇಡೀ ದೇಶದ ಎಲ್ಲ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಇದೇ ತರಹದ ವಾತಾವರಣ ಇದೆ.
ಬೇರೆ ರಾಜ್ಯಗಳು ಉದಾಹರಣೆಗೆ ಪಕ್ಕದ ತೆಲಂಗಾಣ, ಛತ್ತಿಸ್ಗಡ್, ಬಿಹಾರ್, ಒಡಿಸ್ಸಾ ಮತ್ತು ಪಂಜಾಬ್ ಹರಿಯಾಣ ರಾಜ್ಯಗಳ ಮುಖ್ಯಮಂತ್ರಿಗಳು ಭತ್ತ ನಾಟಿ ಮಾಡಿರುವ ಜನವರಿ ತಿಂಗಳಿನಿಂದ ಕೇಂದ್ರ ಸರ್ಕಾರದ ಜೊತೆಗೆ ಸಂಪರ್ಕವಿಟ್ಟುಕೊಂಡು ರೈತರ ಕಡೆಯಿಂದ ಬೆಂಬಲ ಬೆಲೆಗೆ ಭತ್ತ ಖರೀದಿ ಮಾಡಲೇಬೇಕು ಎಂದು ಹೋರಾಟ ಶುರುವಿಟ್ಟುಕೊಂಡರು! ಆ ನಿಟ್ಟಿನಲ್ಲಿ ಸಫಲರಾಗಿದ್ದಾರೆ, ಪಕ್ಕದ ತೆಲಂಗಾಣ ಸೇರಿ ಆಯಾ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಆಹಾರ ಇಲಾಖೆ ಒಂದು ಕ್ವಿಂಟಾಲ್ ಭತ್ತವನ್ನು 2050/ ರೂಪಾಯಿಗೆ ಖರೀದಿ ಮಾಡ್ತಾ ಇದೆ, ಜೊತೆಗೆ ಆಯಾ ರಾಜ್ಯ ಸರ್ಕಾರಗಳು ಪ್ರೋತ್ಸಾಹಧನ ಎಂದು 200/ ಸೇರಿಸಿ 2250/ ರೂಪಾಯಿ ಪ್ರತಿ ಕ್ವಿಂಟಲ್ ಭತ್ತಕ್ಕೆ ರೈತನಿಗೆ ನೀಡುತ್ತಿವೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಇಲ್ಲಿನ ಜನಪ್ರತಿನಿಧಿಗಳು ನಿರ್ಲಕ್ಷ ವಹಿಸಿದ ಕಾರಣ ಈ ರಾಜ್ಯದಲ್ಲಿ ಭತ್ತ ಬೆಳೆದ ರೈತರ ಪರಿಸ್ಥಿತಿ ಭಯಾನಕವಾಗಿದೆ! ಇವತ್ತು ಕರ್ನಾಟಕ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮತ್ತು ಸಿಂಧನೂರಿನಲ್ಲಿ ಕೂಡ ಮುಕ್ತ ಮಾರ್ಕೆಟ್ನಲ್ಲಿ 75 ಕೆಜಿ ಭತ್ತದ ಬೆಲೆ 1000 ರೂ ರಿಂದ 1100 ನೂರು ಮಾತ್ರ! ಬೆಂಬಲ ಬೆಲೆ ಪ್ರಕಾರ ಸರ್ಕಾರ ಭತ್ತವನ್ನು ಖರೀದಿ ಮಾಡಿದಾಗ 75 ಕೆಜಿ ಪ್ರತಿ ಚೀಲಕ್ಕೆ 1662 ರೂ ರೈತನಿಗೆ ಸಿಗುತ್ತದೆ, ಇದರಲ್ಲಿ ಖಾಲೀ ಚೀಲ ಮತ್ತು ಟ್ರಾನ್ಸ್ಪೋರ್ಟ್ ಸೇರಿ ರೂ 62 ತೆಗೆದು ರೂ 1600 ರೈತರಿಗೆ ಸಿಗುತ್ತದೆ.ನಮ್ಮ ರೈತರಿಂದ ಬೆಂಬಲ ಬೆಲೆಗೆ ಸರಕಾರ ಭತ್ತವನ್ನು ಖರೀದಿ ಮಾಡದೇ ಇರುವುದರಿಂದ ಆಗುತ್ತಿರುವ ನಷ್ಟ ಪ್ರತಿ 75ಕೇಜಿ ಚೀಲಕ್ಕೆ ರೂ 500 ರಿಂದ ರೂ 600 ರೂಪಾಯಿ
ಒಂದು ಎಕರೆಗೆ ಸರಾಸರಿ 35 ಚೀಲ ಇಳುವರಿ ಬರುತ್ತದೆ, 35×500=17500 ರೂಪಾಯಿ! ನಿಮಗೆ ಅರ್ಥವಾಗಿದೆ ಎಂದುಕೊಂಡಿದ್ದೇನೆ! ನಮ್ಮ ರೈತನು ಪ್ರತಿ ಎಕರೆಗೆ ರೂ 17,500 ರೂಪಾಯಿ ಗಳಿಂದ ರೂ 20.000 ರೂಪಾಯಿ ಕಳೆದುಕೊಂಡು ಹಾಳಾಗಿರುವುದರಿಂದ ಆತ್ಮಹತ್ಯೆಗೆ ಶರಣಾಗದೆ ಮತ್ತೇನನ್ನು ಮಾಡುತ್ತಾನೆ? ನಮ್ಮ ರಾಜ್ಯದ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಕೃಷಿ ಸಚಿವರ ಕರ್ತವ್ಯ ಚ್ಯುತಿ! ನೀರಾವರಿ ಪ್ರದೇಶಗಳಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳ ಬೇಜವಾಬ್ದಾರಿ! ಮುಖ್ಯಮಂತ್ರಿಗಳ ಮುಂದಾಲೋಚನೆಯ ಲೋಪ! ಈ ರಾಜ್ಯದ ರೈತರಿಗೆ ಶಾಪವಾಗಿದೆ!
ಇವತ್ತು ರೈತರು ಎಚ್ಚೆತ್ತುಕೊಳ್ಳಬೇಕಾಗಿದೆ, ಜವಾಬ್ದಾರಿಯಿಂದ ನುಣುಚಿಕೊಂಡಿದ್ದ ಪ್ರತಿಯೊಬ್ಬರನ್ನು ಪ್ರಶ್ನಿಸಬೇಕಾಗಿದೆ ಎಂದು ಎಂ ನರೇಂದ್ರನಾಥ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಲ್ಲದೇ ರೈತರ ಪರವಾಗಿ ಪತ್ರಿಕೆ ಹೇಳಿಕೆ ನೀಡಿದರು…
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
