ಚಿತ್ರದುರ್ಗ: ಮೊಳಕಾಲ್ಮುರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 14,26 ಲಕ್ಷ ರೂ ವೆಚ್ಚದಲ್ಲಿ ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ತಾಲ್ಲೂಕಿನ ತುಮಕೂರಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿ ಅಭಿವೃದ್ಧಿಯಿಂದ ಕೆರೆ ನೀರು ತುಂಬಿ ಇಂದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ನೂರಾರು ವರ್ಷಗಳ ಐತಿಹ್ಯ ಹೊಂದಿರುವ ಈ ಕೆರೆ ಗ್ರಾಮದ ಕುಡಿಯುವ ನೀರಿನ ಮೂಲ. ಹೂಳು ತುಂಬಿಕೊಂಡಿದ್ದ ಈ ಕೆರೆಯನ್ನು ಕಳೆದ ವರ್ಷ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ‘ನಮ್ಮ ಗ್ರಾಮ ನಮ್ಮಕೆರೆ’ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಿತ್ತು ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.
ಧರ್ಮಸ್ಥಳ ಸಂಸ್ಥೆ ಯೋಜನೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರು ಕೈ ಜೋಡಿಸಿದರು. ಧರ್ಮಸ್ಥಳ ಸಂಸ್ಥೆಯು ₹ 14.24 ಲಕ್ಷ ದೇಣಿಗೆ ನೀಡಿದೆ. ಈ ಕಾರ್ಯದಲ್ಲಿ ಕೆರೆ ಹೂಳೆತ್ತುವುದು, ಕೆರೆ ಅಂಚು ರಕ್ಷಣೆ ಕಾರ್ಯ, ಸೋಲಾರ್ ದೀಪ ಅಳವಡಿಕೆ ಮಾಡಲಾಗಿದೆ ಎಂದು ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಣ್ಣ ಮಾಹಿತಿ ನೀಡಿದರು.
37 ದಿನಗಳ ಕಾಲ ನಡೆದ ಅಭಿವೃದ್ಧಿಯಲ್ಲಿ ಗ್ರಾಮಸ್ಥರು 6 ಸಾವಿರ ಲೋಡ್, ಧರ್ಮಸ್ಥಳ ಸಂಸ್ಥೆಯು 9 ಸಾವಿರ ಲೋಡ್ನಷ್ಟು ಹೂಳು ಎತ್ತಿದ್ದಾರೆ. ಒಟ್ಟು 24.16 ಎಕರೆ ವಿಸ್ತೀರ್ಣ ವಿರುವ ಕೆರೆಯಲ್ಲಿ 10 ಎಕರೆಯಲ್ಲಿ ಹೂಳು ಎತ್ತಲಾಗಿದೆ. ಇದಕ್ಕೆ ಕೆರೆ ಸಮಿತಿ ಗೌರವಾಧ್ಯಕ್ಷ ಎಚ್ ಎಎಲ್ ನಿವೃತ್ತ ಅಧಿಕಾರಿ ಟಿ.ಜಿ.ಪಾಪಯ್ಯ ಮತ್ತು ಸದಸ್ಯರ ಸಹಕಾರ ಸ್ಮರಣೀಯ. ಈಚೆಗೆ ಬಿದ್ದಿರುವ ಮಳೆಯಿಂದಾಗಿ ಕೆರೆ ಪೂರ್ಣ ತುಂಬಿಕೊಂಡಿದೆ. ಇಲ್ಲಿ ಗ್ರಾಮ ಪಂಚಾಯಿತಿ ಕುಡಿಯುವ ನೀರಿನ ಕೊಳವೆಬಾವಿ ಕೊರೆಸಿದ್ದು ಕುಡಿಯುವ ನೀರಿನ ಸಮಸ್ಯೆ ನೀಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
