ಯಶು ಮುದ್ದು.. ಕಿಸ್ ಮಿ, ಹಗ್ ಮಿ! ಲೇಡಿ ರೌಡಿಶೀಟರ್ ಯಶಸ್ವಿನಿ ಹಿಂದೆ ಬಿದ್ದ ಪೊಲೀಸ್ ಇನ್ಸ್ಪೆಕ್ಟರ್..?
ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಾಪಣ್ಣ ಅವರ ವಿರುದ್ಧ ಲೇಡಿ ರೌಡಿಶೀಟರ್ ಯಶಸ್ವಿನಿ ಕಿರುಕುಳ ಆರೋಪ ಮಾಡಿದ್ದಾಳೆ. ನನ್ನ ಇನ್ಸ್ ಪೆಕ್ಟರ್ ಅನ್ನಬೇಡ, ಪಾಪು ಅಂತ ಕರೀ ಎಂದು ಡಿಮ್ಯಾಂಡ್ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾಳೆ.
ಬೆಂಗಳೂರು: ಸಮಾಜಕ್ಕೆ ರಕ್ಷಣೆ ನೀಡಬೇಕಾದ ಪೊಲೀಸರೇ ದಾರಿ ತಪ್ಪಿದರೆ ಹೇಗಿರುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಖಾಕಿ ತೊಟ್ಟ ಪೊಲೀಸ್ ಇನ್ಸ್ಪೆಕ್ಟರ್ ಓರ್ವ, ಲೇಡಿ ರೌಡಿಶೀಟರ್ ಹಿಂದೆ ಬಿದ್ದು ‘ಕಿಸ್ ಕೊಡು, ಹಗ್ ಮಾಡ್ಕೋ’ ಎಂದು ಒತ್ತಾಯಿಸಿದ ಆರೋಪ ಕೇಳಿಬಂದಿದೆ.
ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಾಪಣ್ಣ ಎಂಬುವವರೇ ಲೇಡಿ ರೌಡಿಶೀಟರ್ ಯಶಸ್ವಿನಿಗೆ ಮೆಸೇಜ್ ಹಾಗೂ ಕರೆ ಮಾಡಿ ಕಿರುಕುಳ ನೀಡ್ತಿರುವ ಆರೋಪ ಎದುರಿಸುತ್ತಿರುವ ಅಧಿಕಾರಿ. ಕಳೆದ 3 ತಿಂಗಳಿನಿಂದ ಇನ್ಸ್ಪೆಕ್ಟರ್ ಪಾಪಣ್ಣ ಆಕೆಗೆ ನಿರಂತರವಾಗಿ ಕಾಟ ಕೊಡ್ತಿದ್ದಾರೆ ಎಂದು ಆರೋಪಿಸಿ ಯಶಸ್ವಿನಿ ಇದೀಗ ನೇರವಾಗಿ ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾಳೆ.
ಲೇಡಿ ರೌಡಿಶೀಟರ್ ಯಶಸ್ವಿನಿಗೆ ಇನ್ಸ್ಪೆಕ್ಟರ್ ಪಾಪಣ್ಣ ಕಳುಹಿಸಿದ್ದಾರೆ ಎನ್ನಲಾದ ವಾಟ್ಸಾಪ್ ಮೆಸೇಜ್ಗಳು ಹಾಗೂ ಆಡಿಯೋ ಸಂಭಾಷಣೆಗಳು ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸುವಂತಿವೆ. ಆಕೆಯ ಚಾಟ್ನಲ್ಲಿರುವ ಮೆಸೇಜ್ಗಳು ಹೀಗಿವೆ..
ಯಶು ಮುದ್ದು, ಯಶು ಮುದ್ದು ಏನಾಗಿದೆ ಚಿನ್ನು ನಿನಗೆ?’
‘ನಾನು ಮನೆಗೆ ಹೋಗಿಲ್ಲ, ನಿಮ್ ಮನೆಗೆ ಬರ್ತೀನಿ. ನಿನಗೆ ಕಿಸ್ ಮಾಡ್ಬೇಕು ಅನಿಸ್ತಿದೆ, ಹಗ್ ಮಾಡ್ಕೊಳ್ಬೇಕು ಅನಿಸ್ತಿದೆ.’
‘ಯಾಕ್ ನನ್ನ ಜೊತೆ ಮಾತಾಡಲ್ಲ ನೀನು? ಯಾಕ್ ನನ್ ಮೆಸೇಜಸ್ ಗೆ ರಿಪ್ಲೈ ಮಾಡಲ್ಲ ನೀನು?’
‘ಏ ಹುಡ್ಗಿ ಆರಾಮಿದ್ಯ, ಒಂದ್ ಸ್ಮೈಲ್ ಕೊಡು’.
‘ನಾನು ನಿನ್ನ ಯಶು ಬೇಬಿ ಅಂತೀನಿ, ನೀನು ನನ್ನ ಇನ್ಸ್’ಪೆಕ್ಟರ್ ಪಾಪಣ್ಣ ಅನ್ನಬಾರದು.. ಪಾಪು ಅನ್ನಬೇಕು. ಇನ್ಸ್’ಪೆಕ್ಟರ್ ಅಂದ್ರೆ ಅಲ್ಲೆಬಂದು ಹೊಡಿತೀನಿ ನೋಡು.’
‘ಯಶು.. ಯಶು ಮುದ್ದು ಬಂಗಾರು ಒಂದ್ ಮುತ್ತು ಬೇಕು.. ಹಗ್ ಮಿ, ಕಿಸ್ ಮಿ!’
ಹೀಗೆ ಒಬ್ಬ ಪೊಲೀಸ್ ಅಧಿಕಾರಿಗೆ ಶೋಭೆ ತರದ ರೀತಿಯಲ್ಲಿ ರೌಡಿ ಬೇಬಿಯ ಹಿಂದೆ ಬಿದ್ದು ಇನ್ಸ್ಪೆಕ್ಟರ್ ಪಾಪಣ್ಣ ವಿಕೃತಿ ಮೆರೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಿಎಂ ಸಂಬಂಧಿ ಎಂದು ಅವಾಜ್!
ಇಷ್ಟೆಲ್ಲಾ ಕಿರುಕುಳ ನೀಡಿದ್ದಲ್ಲದೆ, ತನ್ನ ವಿರುದ್ಧ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಇನ್ಸ್ಪೆಕ್ಟರ್ ದರ್ಪ ತೋರಿದ್ದಾರಂತೆ. ನನ್ನ ಪತ್ನಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿ. ಹೀಗಾಗಿ ನನ್ನನ್ನು ಯಾರೂ ಏನು ಮಾಡಲಿಕ್ಕಾಗಲ್ಲ ಎಂದು ಅವಾಜ್ ಹಾಕಿರುವ ಗಂಭೀರ ಆರೋಪವೂ ಇನ್ಸ್ಪೆಕ್ಟರ್ ಮೇಲಿದೆ.
2017ರಲ್ಲೇ ಶುರುವಾಗಿತ್ತು ಕಾಟ?
2017ರಲ್ಲಿ ಪಾಪಣ್ಣ ಅವರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದರು. ಆ ವೇಳೆ ಯಶಸ್ವಿನಿ ಅದೇ ಬಸವನಗುಡಿ ಠಾಣೆಯ ರೌಡಿಶೀಟರ್ ಆಗಿದ್ದಳು. ಆಗಲೇ ಆಕೆಯ ನಂಬರ್ ಪಡೆದುಕೊಂಡಿದ್ದ ಪಾಪಣ್ಣ, ಮೆಸೇಜ್, ಕಾಲ್ ಮಾಡಲು ಶುರು ಮಾಡಿದ್ದರು. ಕಿರಿಕಿರಿ ತಾಳಲಾರದೆ ಆಗಲೇ ಯಶಸ್ವಿನಿ ಆತನ ನಂಬರ್ ಬ್ಲಾಕ್ ಮಾಡಿದ್ದಳು.
ಪ್ರಸ್ತುತ ಯಶಸ್ವಿನಿ ಕೋಣನಕುಂಟೆ ವ್ಯಾಪ್ತಿಯಲ್ಲಿ ವಾಸವಿದ್ದಾಳೆ. ವಿಪರ್ಯಾಸವೆಂದರೆ ಪಾಪಣ್ಣ ಇದೀಗ ಅದೇ ಕೋಣನಕುಂಟೆ ಠಾಣೆಯ ಇನ್ಸ್ಪೆಕ್ಟರ್ ಆಗಿ ಬಂದಿದ್ದಾರೆ. 2026ರ ಜನವರಿಯಿಂದ ಮತ್ತೆ ಕಿರುಕುಳ ಶುರು ಮಾಡಿದ್ದು, ಆತನ ನಂಬರ್ ಬ್ಲಾಕ್ ಮಾಡಿದರೂ ಬೇರೆ ಬೇರೆ ನಂಬರ್ಗಳಿಂದ ಕರೆ ಮಾಡಿ ಕಾಟ ಕೊಡುತ್ತಿದ್ದಾರೆ ಎಂದು ಯಶಸ್ವಿನಿ ದೂರಿದ್ದಾಳೆ.
ಅಂದಹಾಗೆ ಲೇಡಿ ರೌಡಿಶೀಟರ್ ಯಶಸ್ವಿನಿಯ ಪತಿ ಮಹೇಶ್ ಕೂಡ ರೌಡಿಶೀಟರ್ ಆಗಿದ್ದಾನೆ. ಕಿರುಕುಳ ಮಿತಿಮೀರಿದಾಗ, ಯಶಸ್ವಿನಿ ನೇರವಾಗಿ ಪೊಲೀಸ್ ಕಮಿಷನರ್ ಮೊರೆ ಹೋಗಿದ್ದು, ಇನ್ಸ್ಪೆಕ್ಟರ್ ಪಾಪಣ್ಣ ಮಾತಾಡಿರುವ ಆಡಿಯೋ, ವಾಟ್ಸಾಫ್ ಚಾಟ್ ಸ್ಕ್ರೀನ್ಶಾಟ್ ಸಮೇತ ದೂರು ದಾಖಲಿಸಿದ್ದಾಳೆ. ಈ ಘಟನೆ ಇದೀಗ ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
