ನಿರಂತರ ಮಳೆ ರೈತರಿಗೆ ನೆರವಾಗುವಂತೆ ವಿಜ್ಞಾನಿಗಳಿಗೆ ಕೃಷಿ ವಿವಿ ಕುಲಪತಿ ಕಟ್ಟಿಮನಿ ಕರೆ
ಬಳ್ಳಾರಿ,ಸೆ.: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ. ಎನ್. ಕಟ್ಟಿಮನಿ ಅವರ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳನ್ನೊಳಗೊಂಡಂತೆ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳು, ಕೃಷಿ ಮಹಾವಿದ್ಯಾಲಯಗಳು ಹಾಗೂ ಕೃಷಿ ಸಂಶೋಧನಾ ಕೇಂದ್ರಗಳ ಮುಖ್ಯಸ್ಥರುಗಳೊಂದಿಗೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ಸಭೆ ನಡೆಸಿದರು.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳಿಗೆ ಉಂಟಾದ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನೆಯನ್ನು ಇದೇ ಸಂದರ್ಭದಲ್ಲಿ ಅವರು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಅವರು ಕಳೆದ ಕೆಲ ವಾರಗಳಿಂದ ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸರಾಸರಿಗಿಂತಲೂ ಹೆಚ್ಚು ಮಳೆಯಾಗಿದೆ. ಅತಿಯಾದ ಮಳೆಯಿಂದಾಗಿ ಬೆಳೆಗಳ ಬೆಳವಣೆಗೆಯೂ ಕುಂಠಿತಗೊಳ್ಳುವದಲ್ಲದೆ, ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮಥ್ರ್ಯ ಕಡಿಮೆಯಾಗುವುದು. ಇಂತಹ ಸಂದರ್ಭಗಳಲ್ಲಿ ಮಣ್ಣಿನಲ್ಲಿ ಹೆಚ್ಚಾಗಿರುವ ನೀರನ್ನು ಬಸಿದು ತೆಗೆದು, ಭೂಮಿಯನ್ನು ಶಾಶ್ವತವಾಗಿ ಸುಧಾರಿಸಬೇಕೆಂದರೆ, ದೀರ್ಘ ಕಾಲದ ಹೊಲದ ಸುತ್ತ ಬಸಿಗಾಲುವೆಗಳನ್ನು ತೆಗೆಯಬಹುದಾಗಿದ್ದು, ಬೆಳೆಯು ಸಂಪೂರ್ಣ ಹಾಳಾಗಿದ್ದರೆ ಕಡಲೆ, ಹಿಂಗಾರಿ ಜೋಳ, ನವಣೆ, ಕುಸುಬೆ, ಬೆಳೆಗಳನ್ನು ಪರ್ಯಾಯ ಬೆಳೆಯಾಗಿ ತೆಗೆದುಕೊಳ್ಳಬಹುದೆಂದು ಸಲಹೆ ನೀಡಿದರು.
ಈಗಾಗಲೇ ವಿವಿಧ ಬೆಳವಣಿಗೆ ಹಂತದಲ್ಲಿರುವ ಮುಂಗಾರು ಬೆಳೆಗಳಿಗೆ ಸಾಕಷ್ಟು ಹಾನಿಯಾಗುತ್ತಿದ್ದು, ರೈತರು ಅತಿವೃಷ್ಠಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು, ಕೃಷಿ ಸಲಹೆಗಳನ್ನು ಗ್ರಾಮೀಣ ಮಟ್ಟದಲ್ಲಿ ವಿವಿಧ ವಿಸ್ತರಣಾ ಚಟುವಟಿಕೆಗಳ ಮುಖಾಂತರ ತಲುಪಿಸಲು ವಿಶ್ವವಿದ್ಯಾಲಯದ ಪ್ರತಿ ವಿಜ್ಞಾನಿಗಳು, ಸಹಾಯಕ ಪ್ರಾಧ್ಯಾಪಕರುಗಳು, ವಿಷಯ ತಜ್ಞರುಗಳು ಇನ್ನೂ ಹೆಚ್ಚಿನದಾಗಿ ಶ್ರಮಿಸಬೇಕೆಂದು ಸೂಚಿಸಿದರು.
ಕಲ್ಯಾಣ ಕರ್ನಾಟಕದ ಭಾಗದ ರೈತರಿಗೆ ಕೃಷಿ ಮಾಹಿತಿಯನ್ನು ನೀಡಲು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ಒಳಗೊಂಡ ವಿಜ್ಞಾನಿಗಳ ಸಮಿತಿಯು ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಸೂಕ್ತ ಕೃಷಿ ಮಾಹಿತಿಯನ್ನು ಒದಗಿಸಿ, ರೈತರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕೆಂದು ವಿಜ್ಞಾನಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ವಿವಿಯ ಶಿಕ್ಷಣ ನಿರ್ದೇಶಕ ಡಾ. ಎಮ್. ಜಿ. ಪಾಟೀಲ್, ಸಂಶೋಧನಾ ಹಾಗೂ ವಿಸ್ತರಣಾ ನಿರ್ದೇಶಕ ಡಾ. ಬಿ. ಕೆ. ದೇಸಾಯಿ, ವಿಶ್ವವಿದ್ಯಾಲಯದ ಅಧಿಕಾರಿಗಳು, ವಿವಿಧ ಕೇಂದ್ರಗಳ ಮುಖ್ಯಸ್ಥರುಗಳು, ವಿಜ್ಞಾನಿಗಳು ಪಾಲ್ಗೊಂಡಿದ್ದರು…

ವರದಿ. ವಿರೇಶ್, ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
