ಪೊಲೀಸ್ ಠಾಣೆಗಳಲ್ಲಿ ‘ದಲಿತರ ದಿನ’ ಕಡ್ಡಾಯ…!!!

*ಪೊಲೀಸ್ ಠಾಣೆಗಳಲ್ಲಿ ‘ದಲಿತರ ದಿನ’ ಕಡ್ಡಾಯ*

ಪ್ರತಿ ತಿಂಗಳ 2ನೇ ಭಾನುವಾರ ಸಭೆ / ಅನಿಯಮಿತ, ಕಾಟಾಚಾರದ ಸಭೆ ನಡೆಸುವಂತಿಲ್ಲ / ಡಿಜಿಪಿ ಕಟ್ಟಾಜ್ಞೆ.
ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಈವರೆಗೆ ಅನಿಯಮಿತವಾಗಿ ನಡೆಯುತ್ತಿದ್ದ ಮತ್ತು ನಡೆದರೂ ಕಾಟಾಚಾರಕ್ಕೆಂಬಂತೆ ಮುಗಿದುಹೋಗುತ್ತಿದ್ದ ‘ಪರಿಶಿಷ್ಟರ ಕುಂದುಕೊರತೆ ಪರಾಮರ್ಶೆ ಸಭೆ’ಗಳನ್ನು ನಿಯಮಿತವಾಗಿ ನಡೆಸುವುದು ಇನ್ನು ಕಡ್ಡಾಯ.
ಎಲ್ಲ ಪೊಲೀಸ್ ಠಾಣೆಗಳಲ್ಲಿ ‘ದಲಿತರ ದಿನ’ದ ಹೆಸರಿನಲ್ಲಿ ಪ್ರತಿ ತಿಂಗಳ ಎರಡನೇ ಭಾನುವಾರ ಕಡ್ಡಾಯವಾಗಿ ಪರಾಮರ್ಶೆ ಸಭೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ದಲಿತರ ರಕ್ಷಣೆಗೆ ಪೊಲೀಸ್ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ, ದಲಿತರ ದಿನದ ಹೆಸರಿನಲ್ಲಿ ಪ್ರತಿ ಠಾಣೆಗಳಲ್ಲಿ ಪರಾಮರ್ಶೆ ಸಭೆ ನಡೆಸಿ, ಇಲಾಖಾ ಮಟ್ಟದಲ್ಲಿಯೇ ಪರಿಹಾರ ಕಾಣುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸೂಚಿಸಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಆಲಿಸಲು, ಅವರ ಸಮಸ್ಯೆಗಳನ್ನು ಸ್ಥಳೀಯವಾಗಿ ಕಾಲಮಿತಿಯಲ್ಲಿ ಪರಿಹರಿಸಲು ಚರ್ಚೆಗೆ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯ ದಲಿತ ಮುಖಂಡರು, ಸಂಘಟನೆ ಪದಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ, ಡಿಸಿಆರ್‌ಇ ಘಟಕದ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಈ ಸಭೆಗೆ ಆಹ್ವಾನಿಸುವಂತೆಯೂ ಸೂಚಿಸಲಾಗಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ವಿರುದ್ಧ ದಾಖಲಾಗಿರುವ ಪ್ರಕರಣ, ಅದಕ್ಕೆ ಕಾರಣಗಳು, ದಲಿತರಿಗೆ ರಕ್ಷಣೆ ನೀಡಲು ಕಂದಾಯ, ಪೊಲೀಸ್ ಅಧಿಕಾರಿಗಳು ನಿರಾಕರಿಸಿದ ಪ್ರಕರಣಗಳು ಹಾಗೂ ಯಾವುದೇ ಒಂದು ಪ್ರದೇಶದಲ್ಲಿ ದಲಿತರ ವಿರುದ್ಧ ತೆರೆದಿರುವ ರೌಡಿ ಪಟ್ಟಿಗಳ ಕುರಿತೂ ಸಭೆಯಲ್ಲಿ ಪರಾಮರ್ಶೆ ನಡೆಯಲಿದೆ.
ದಲಿತರ ವಿರುದ್ಧ ದಾಖಲಾದ ದೂರುಗಳಲ್ಲಿ ವಿಶೇಷ ನ್ಯಾಯಾಲಯಕ್ಕೆ ವಹಿಸಿದ ಪ್ರಕರಣಗಳು, ಅವುಗಳ ಪ್ರಗತಿ ಹಾಗೂ ಸಮರ್ಥನಿಯವಲ್ಲದ ಪ್ರಕರಣಗಳನ್ನು ಹಿಂಪಡೆಯಲು ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಅಲ್ಲದೆ, ಸಭೆ ನಡವಳಿ, ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಠಾಣಾಧಿಕಾರಿಗಳು ತಮ್ಮ ಜಿಲ್ಲೆ ವರಿಷ್ಠಾಧಿಕಾರಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
*ಸ್ಥಳ ಭೇಟಿಗೆ ಸೂಚನೆ:*
ದಲಿತರ ವಿರುದ್ಧ ಯಾವುದೇ ದೌರ್ಜನ್ಯ ಪ್ರಕರಣಗಳು ವರದಿಯಾದಲ್ಲಿ ಸಂಬಂಧಿಸಿದ ಮೇಲಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತನಿಖಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಆದೇಶದಲ್ಲಿ ಡಿಜಿಪಿ ಸೂಚನೆ ನೀಡಿದ್ದಾರೆ. ಅಲ್ಲದೆ, ಜಿಲ್ಲಾ ಮಟ್ಟದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು, ಕಮಿಷನರೇಟ್‌ಗಳಲ್ಲಿ ಆಯುಕ್ತರು ಪ್ರತಿ ತಿಂಗಳ ಕೊನೆ ಭಾನುವಾರ ತಮ್ಮ ಅಧಿಕಾರಿಗಳೊಂದಿಗೆ ಪರಾಮರ್ಶೆ ಸಭೆ ನಡೆಸುವುದು, ಆ ಕುರಿತ ವರದಿಯನ್ನು ಮುಖ್ಯ ಕಚೇರಿಗೆ ಸಲ್ಲಿಸುವುದು ಹಾಗೂ ಜಿಲ್ಲಾ, ಉಪ ವಿಭಾಗ, ತಾಲೂಕು ಮಟ್ಟದ ದಲಿತರ ದೌರ್ಜನ್ಯ ತಡೆ ಸಮಿತಿ ಸಭೆಗಳಲ್ಲಿ ಭಾಗವಹಿಸಲು ಅವರು ಆದೇಶಿಸಿದ್ದಾರೆ.
ದಲಿತರ ಕಾಲೋನಿಗಳಿಗೆ ಭೇಟಿ ನೀಡುವುದು ಹಾಗೂ ಪ್ರತಿ ತಿಂಗಳ ಕೊನೆಯ ವಾರದ ಒಂದು ದಿನವನ್ನು ದಲಿತರ ದಿನವನ್ನಾಗಿ ಆಚರಿಸಿ ಅವರ ಕುಂದುಕೊರತೆ ಆಲಿಸುವಂತೆ ಮಾ. 13, 1985, ಜ.6, 1988 ರಲ್ಲಿಯೇ ಪೊಲೀಸ್ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಅಲ್ಲದೆ, ಇದಕ್ಕೆ ಸಂಬಂಧಿಸಿದಂತೆ ಜ.31, 1989, ಡಿ.15, 1990 ರಲ್ಲಿ ಹೊರಡಿಸಿದ್ದ ಇಲಾಖೆ ಸ್ಥಾಯಿ ಆದೇಶದಲ್ಲೂ ಸೂಚನೆ ನೀಡಲಾಗಿತ್ತು. ಆಗಿನಿಂದ ಅದು ಕಾಟಾಚಾರಕ್ಕೆ ಎಂಬಂತೆ ನಡೆದುಕೊಂಡು ಬರುತ್ತಿತ್ತು. ಇತ್ತೀಚೆಗೆ ದಲಿತ ಪರ ಸಂಘಟನೆಗಳ ಮುಖಂಡರು, ಪೊಲೀಸರು ದಲಿತರ ಕುಂದುಕೊರತೆಗಳನ್ನು ಆಲಿಸುತ್ತಿಲ್ಲವೆಂದು ಹಲವು ಮನವಿಗಳಲ್ಲಿ ದೂರಿದ್ದರು. ಆ ಹಿನ್ನೆಲೆಯಲ್ಲಿ ಡಿಜಿಪಿ ಸಭೆ ನಡೆಸುವುದನ್ನು ಕಡ್ಡಾಯಗೊಳಿಸಿ ಕಳೆದ ತಿಂಗಳ ಕೊನೆಯಲ್ಲಿ ಹೊಸ ಆದೇಶ ಹೊರಡಿಸಿದ್ದಾರೆ.
ಡಿಜಿಪಿ ಆದೇಶದನ್ವಯ ದಲಿತರ ಪ್ರಕರಣಗಳ ಕುರಿತು ಪರಾಮರ್ಶೆ ಸಭೆ ನಡೆಸುವಂತೆ ಪ್ರತಿ ಠಾಣಾಧಿಕಾರಿಗಳಿಗೆ ತಿಳಿಸಲಾಗಿದೆ. ನೊಂದ ದಲಿತರು ಯಾವುದೇ ಸಂದರ್ಭದಲ್ಲೂ ತಮ್ಮನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ದೂರವಾಣಿ ಸಂಖ್ಯೆ ನೀಡುವಂತೆಯೂ ಸೂಚಿಸಲಾಗಿದೆ.

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend