ವರದಿ. ಸಂದೀಪ್, ಸಿ ಎಂ ಹೊಳೆ

ಮದುವಣಗಿತ್ತಿಯಂತೆ ಶೃಂಗಾರಗೊಂಡ ರಾಜನಹಳ್ಳಿ
ಹರಿಹರ: ವಾಲ್ಮೀಕಿ ಸಮುದಾಯದ ಜಾಗೃತಿ, ಕಲೆ, ಸಂಸ್ಕೃತಿ ಹಾಗೂ ಹೋರಾಟ ಅನಾವರಣದ ವೇದಿಕೆಯಾದ ವಾಲ್ಮೀಕಿ ಜಾತ್ರೆಗೆ ತಾಲ್ಲೂಕಿನ ರಾಜನಹಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ಗುರುಪೀಠ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಗುರುಪೀಠದ ಆವರಣದಲ್ಲಿ ಫೆ. 8 ಹಾಗೂ 9ರಂದು ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಚಿವ ರಮೇಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಜಾತ್ರೆ ನಡೆಯಲಿದೆ. ಜಾತ್ರೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ಜಾತ್ರೆಗೆ ಬರಲಿದ್ದು, ಲಿಂಗೈಕ್ಯ ಜಗದ್ಗುರು ಪುಣ್ಯಾನಂದಪುರಿ ಸ್ವಾಮೀಜಿಯ 14ನೇ ವರ್ಷದ ಪುಣ್ಯಾರಾಧನೆ, ಪ್ರಸನ್ನಾನಂದ ಸ್ವಾಮೀಜಿಯ 13ನೇ ವರ್ಷದ ಪಟ್ಟಾಧಿಕಾರ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.

ಜಾತ್ರೆಯಲ್ಲಿ ನಡೆಯಲಿರುವ ಗೋಷ್ಠಿ, ಧರ್ಮಸಭೆ, ಜನಜಾಗೃತಿ ಹಾಗೂ ವಿವಿಧ ಕಾರ್ಯಕ್ರಮಗಳಿಗಾಗಿ 300×400 ಅಡಿಯ ಜಗದ್ಗುರು ಪುಣ್ಯಾನಂದಪುರಿ ಸ್ವಾಮೀಜಿ ಮಹಾಮಂಟಪ ಹಾಗೂ 60X80 ಅಡಿಯ ಮಾಜಿ ಸಚಿವ ಚಳ್ಳಕೇರಿ ತಿಪ್ಪೇಸ್ವಾಮಿ ವೇದಿಕೆಯನ್ನು ನಿರ್ಮಿಸಲಾಗಿದೆ. ಸಾರ್ವಜನಿಕರಿಗಾಗಿ 50 ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
‘ಪ್ರಸಾದ ವಿತರಣೆಗೆ 100 ಕೌಂಟರ್, ತಾತ್ಕಲಿಕ ಆಸ್ಪತ್ರೆ, 5 ಭಾಗಗಳಲ್ಲಿ ಶೌಚಾಲಯ ಹಾಗೂ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ 3 ಪರ್ಯಾಯ ರಸ್ತೆ ಹಾಗೂ 50 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವ ಜತೆಗೆ ಗಣ್ಯರಿಗಾಗಿ 4 ತಾತ್ಕಾಲಿಕ ಹೆಲಿಪ್ಯಾಡ್ಗಳನ್ನು ನಿರ್ಮಿಸಲಾಗಿದೆ’ ಎಂದು ಜಾತ್ರಾ ಮಹೋತ್ಸದ ಸಂಚಾಲಕ ಹೊದಿಗೆರೆ ರಮೇಶ್ ಮಾಹಿತಿ ನೀಡಿದರು.
ಈ ಬಾರಿ ಜಾತ್ರೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ದೊರಕುವ ಸೌಲಭ್ಯಗಳ ಕುರಿತು ಮಾಹಿತಿಯುಳ್ಳ ವಸ್ತು ಪ್ರದರ್ಶನಗಳ ಮಳಿಗೆಗಳನ್ನು ಸ್ಥಾಪಿಸಲಾಗಿದೆ.
ಜಾತ್ರೆಯ ಭದ್ರತೆಗಾಗಿ ನಾಲ್ವರು ಡಿವೈಎಸ್ಪಿ, 14 ಸಿಪಿಐ, 37 ಪಿಎಸ್ಐ, 68 ಎಎಸ್ಐ, 490 ಪೊಲೀಸ್ ಸಿಬ್ಬಂದಿ, 50 ಮಹಿಳಾ ಪೊಲೀಸ್ ಸಿಬ್ಬಂದಿ, 2 ಡಿ.ಆರ್ ಹಾಗೂ 4 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಊಟದ ಮೆನು
ಬೆಳಿಗ್ಗೆ ಉಪ್ಪಿಟ್ಟು, ಮಧ್ಯಾಹ್ನ ಗೋಧಿ ಪಾಯಸ, ರೊಟ್ಟಿ, ಬದನೆಕಾಯಿ ಪಲ್ಯ, ಅನ್ನ-ಸಾಂಬರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
