ವಿಜಯನಗರದಲ್ಲಿ ಅಕ್ರಮ ಫುಡ್ ಕೋರ್ಟ್ ಹಾವಳಿ: ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ
ಸಿಎಚ್ಬಿಸಿಎಸ್ ಲೇಔಟ್ನ (ವಾರ್ಡ್ ನಂ. 104) 17 ಮತ್ತು 18ನೇ ಕ್ರಾಸ್ ನಡುವೆ (ವಾಟರ್ ಟ್ಯಾಂಕ್ ಹಿಂಭಾಗ) ತಲೆಎತ್ತಿರುವ ಅಕ್ರಮ ಫುಡ್ ಕೋರ್ಟ್ನಿಂದಾಗಿ ಊರಮಂದಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಡಕುಂಟಾಗುತ್ತದೆ.
ಈ ಕುರಿತು ಮಾನ್ಯ ಸುಪ್ರೀಂ ಕೋರ್ಟ್ನ ಆದೇಶಗಳು ಹಾಗೂ ಸರ್ಕಾರಿ ನಿಯಮಗಳ (Writ Petition No. 14607/2008) ಸ್ಪಷ್ಟ ಉಲ್ಲಂಘನೆಯಾಗುತ್ತಿದೆ. ನಿಯಮಗಳ ಪ್ರಕಾರ ಬೀದಿಬದಿಯಲ್ಲಿ ಬೇಯಿಸಿದ ಆಹಾರ ಇಲ್ಲವೇ ಹಣ್ಣುಗಳನ್ನು ಮಾತ್ರ ಮಾರಬಹುದು ಅಲ್ಲಿಯೇ ಅಡುಗೆ ಮಾಡುವಂತಿಲ್ಲ. ಆದರೆ ಇಲ್ಲಿ ಪಾದಚಾರಿ ಮಾರ್ಗದಲ್ಲೇ ಎಲ್ಪಿಜಿ ಸಿಲಿಂಡರ್ಗಳನ್ನು ಬಳಸಿ ಅಪಾಯಕಾರಿಯಾಗಿ ಅಡುಗೆ ಮಾಡಲಾಗುತ್ತಿದೆ.
ರಸ್ತೆಯ ಎರಡು ಬದಿಗಳಲ್ಲಿ 29ಕ್ಕೂ ಹೆಚ್ಚು ಮಳಿಗೆಗಳು ಹಾಗೂ ಟೇಬಲ್ಗಳನ್ನು ಹಾಕಿ ಪಾದಚಾರಿಗಳ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಇದರಿಂದ ಹಿರಿಯರು, ಮಹಿಳೆಯರು, ಮಕ್ಕಳು ಮತ್ತು ಭಕ್ತರ ಓಡಾಟಕ್ಕೆ ತೀವ್ರ ಅಡ್ಡಿಯಾಗಿದ್ದು, ವಾಹನ ಸಂಚಾರಕ್ಕೂ ತೊಡಕಾಗಿದೆ. ನಿಯಮದ ಪ್ರಕಾರ ಧಾರ್ಮಿಕ ಕೇಂದ್ರಗಳು ಹಾಗೂ ಶಾಲಾ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವಂತಿಲ್ಲ. ಆದರೆ, ಇದು ಸಂಪೂರ್ಣ ವಸತಿ ಪ್ರದೇಶವಾಗಿದ್ದು, ಸಮೀಪದಲ್ಲೇ ವಿನಾಯಕನ ಗುಡಿ ಇದೆ.
ಯಾವುದೇ ಮಳಿಗೆಗಳು FSSAI (ಆಹಾರ ಸುರಕ್ಷತೆ) ಪರವಾನಗಿಯನ್ನು ಹೊಂದಿಲ್ಲ. ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಇದೇ ರಸ್ತೆಯನ್ನು ಶಾಶ್ವತವಾಗಿ ಮುಚ್ಚಿ, 2 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡುವ ಮೂಲಕ ಈ ಅಕ್ರಮಕ್ಕೆ ಕುಮ್ಮಕ್ಕು ನೀಡುವ ಪ್ರಸ್ತಾವನೆ ಇರುವುದು ನಿಜಕ್ಕೂ ದುರದೃಷ್ಟಕರ.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಬಿಬಿಎಂಪಿ ಮುಖ್ಯ ಆಯುಕ್ತರು, ಪಶ್ಚಿಮ ವಲಯದ ಆಯುಕ್ತರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸುಪ್ರೀಂ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಈ ಅಕ್ರಮ ಫುಡ್ ಕೋರ್ಟ್ ಅನ್ನು ತಕ್ಷಣವೇ ತೆರವುಗೊಳಿಸಬೇಕಾಗಿ ನಮ್ಮ ಒತ್ತಾಯ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
