ವರದಕ್ಷಿಣೆಗಾಗಿ ಪತ್ನಿಯ ಕೊಲೆ – ಪತಿ ಸೇರಿ ಮೂವರು ಅರೆಸ್ಟ್.!
ಕಲಬುರಗಿ: ಆಫಜಲಪುರ ತಾಲೂಕಿನ ಬಳ್ಳೂರಗಿ ಬಳಿ ನಡೆದಿದ್ದ ಸಯಾಲಿ ಜಾಧವ್ ಎಂಬಾಕೆಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ (Husband) ಅಕ್ಷಯ್ ಜಾಧವ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
#ಘಟನೆಯ ಹಿನ್ನೆಲೆ:
ಮೃತ ಸಯಾಲಿ ಮತ್ತು ಅಕ್ಷಯ್ 2022ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಅಕ್ಷಯ್ ಹಾಗೂ ಆತನ ಪೋಷಕರು ವರದಕ್ಷಿಣೆಗಾಗಿ (Dowry) ಸಯಾಲಿಗೆ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಸಯಾಲಿ ತವರು ಮನೆಯಿಂದ ಹಣ ತರದಿದ್ದಕ್ಕೆ ಆಕೆಯನ್ನು ಕೊಲೆ ಮಾಡಲು ಅಕ್ಷಯ್ ಸಂಚು ರೂಪಿಸಿದ್ದ.
#ದರ್ಶನದ #ನೆಪದಲ್ಲಿ #ಕೃತ್ಯ:
ದತ್ತಾತ್ರೇಯ ದರ್ಶನಕ್ಕೆಂದು ಗಾಣಗಾಪುರಕ್ಕೆ ಪತ್ನಿಯನ್ನು ಕರೆತಂದ ಅಕ್ಷಯ್, ಪ್ರಯಾಣದ ವೇಳೆ ಕಾರಿನಲ್ಲಿ ವರದಕ್ಷಿಣೆ ವಿಚಾರವಾಗಿ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ ಅಕ್ಷಯ್ ತನ್ನ ಪತ್ನಿ ಸಯಾಲಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮೃತಳ ಕುಟುಂಬಸ್ಥರು ನೀಡಿದ ದೂರಿನನ್ವಯ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪತಿ ಹಾಗೂ ಆತನ ತಂದೆ-ತಾಯಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವರದಕ್ಷಿಣೆ ಕಿರುಕುಳವೇ ಈ ಘೋರ ಕೃತ್ಯಕ್ಕೆ ಮೂಲ ಕಾರಣ ಎಂದು ಎಸ್ಪಿ ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
