ತರಬೇತಿ ಕಾರ್ಯಾಗಾರ
ಗ್ರಾಪಂ ಮಟ್ಟದಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಿ: ಶರಣಬಸವರಾಜ
ಬಳ್ಳಾರಿ,: ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಆರೋಗ್ಯ ಅಮೃತ ಅಭಿಯಾನದ ಮೂಲಕ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸಿ ಮಾನಸಿಕ ಆರೋಗ್ಯ ಹಾಗೂ ಕ್ಷಯರೋಗ ನಿಯಂತ್ರಣ ಮಾಡಲು ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ನ ಉಪ ಕಾರ್ಯದರ್ಶಿ ಶರಣಬಸವರಾಜ ಅವರು ಹೇಳಿದರು.

ಆರೋಗ್ಯ ಅಮೃತ ಅಭಿಯಾನದಡಿ ಕೆಹೆಚ್ಪಿಟಿ ಸಹಯೋಗದಲ್ಲಿ ಗುರುವಾರ ಜಿಪಂನ ನಜೀರ್ಸಾಬ್ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯತ್ ರಾಜ್ ಅಡಿಯಲ್ಲಿರುವ ಸೇವೆಗಳು ಜನತೆಗೆ ತಲುಪಿಸಲು ಮತ್ತು ಸ್ವಚ್ಛ ಭಾರತ ಕನಸು ಸಾಕಾರಗೊಳಿಸಲು ಎಲ್ಲರೂ ಕೈಜೊಡಿಸಬೇಕು ಎಂದು ತಿಳಿಸಿದರು.
ಕ್ಷಯರೋಗ ಮುಕ್ತಗೊಳಿಸಲು ಸಾಂಕ್ರಾಮಿಕ ರೋಗಗಳ ನಿಯಂತ್ರಣದೊಂದಿಗೆ ರಕ್ತಹೀನತೆ ಮತ್ತು ಅಪೌಷ್ಟಿಕತೆ ತಡೆಗಟ್ಟುವ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಬೇಕು. ಸಶಕ್ತ ಸಮುದಾಯವನ್ನು ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಯೋಜನಾ ಅಧಿಕಾರಿ ಚಂದ್ರಶೇಖರ ಗುಡ್ಡಿ, ಜಿಪಂ ಯೋಜನಾ ನಿರ್ದೇಶಕ ಲಕ್ಷ್ಮಣ ಶೃಂಗೇರಿ, ಆರ್ಥಿಕ ಅಧಿಕಾರಿ ಮೊಹಿನುದ್ದೀನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್ ಜನಾರ್ಧನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ, ಕೆಹೆಚ್ಪಿಟಿ ಜಿಲ್ಲಾ ಸಮಾಲೋಚಕ ಪಂಪಾಪತಿ, ತರಬೇತುದಾರರಾಗಿ ಸಹಾಯಕ ನಿರ್ದೇಶಕ ಶ್ರೀಕುಮಾರ, ಡಾ.ಇಂದ್ರಾಣಿ, ಡಾ.ಮೋಹನ ಕುಮಾರಿ, ಡಾ.ಕೊಟ್ರೇಶ, ಡಾ.ಜಬೀನ್ ತಾಜ್, ರಾಮಕೃಷ್ಣ ನಾಯಕ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ. ಉಮೇಶ್. ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
