ಸಂಡೂರು ತಾಲೂಕಿನ 74 ಕೆರೆಗಳಿಗೆ ತುಂಗಭದ್ರ ನೀರು : 1343 ಕೋಟಿ ರೂಪಾಯಿ ಯೋಜನೆ ಜಾರಿಗೆ………!!!!!!!!
ಮುನಿರಾಬಾದ್, ಮಾರ್ಚ್, 03:
ತುಂಗಭದ್ರ ನದಿಯಿಂದ 1.3 ಟಿಎಂಸಿ ನೀರನ್ನು ಸಂಡೂರು ತಾಲೂಕಿನ 74 ಕೆರೆಗಳನ್ನು ಭರ್ತಿ ಮಾಡುವ 1343 ಕೋಟಿ ರೂಪಾಯಿ ಅಂದಾಜು ವೆಚ್ಚದ ಸಮಗ್ರ ಯೋಜನಾ (ಡಿಪಿಆರ್) ವರದಿಯನ್ನು ಸರ್ಕಾರಕ್ಕೆ ಗುರುವಾರ ಸಲ್ಲಿಸಲಾಯಿತು.
ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಬಿಜೆಪಿ ಮುಖಂಡ ಕಾರ್ತಿಕ್ ಘೋರ್ಪಡೆ ಅವರು ಹೆಚ್ಚಿನ ಮುತುವರ್ಜಿ ತೋರಿದ ಕಾರಣ ಜನಪರವಾದ ಈ ಯೋಜನೆಯ ಸಮಗ್ರ ವರದಿ ತ್ವರಿತವಾಗಿ ಸಿದ್ಧವಾಗಿದೆ.
ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು, `ಸಂಡೂರು ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಕುರಿತು ಬಿಜೆಪಿ ಮುಖಂಡ ಕಾರ್ತಿಕ್ ಘೋರ್ಪಡೆ ಅವರು ನನ್ನೊಂದಿಗೆ ಅನೇಕಸಲ ಚರ್ಚೆ ನಡೆಸಿದ್ದರು. ಈ ಕುರಿತು ಸಮಗ್ರ ಯೋಜನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಆದೇಶ ನೀಡಲಾಗಿತ್ತು. ಅಧಿಕಾರಿಗಳು ಡಿಪಿಆರ್ ಸಿದ್ಧಪಡಿಸಿದ್ದು, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಯೋಜನೆಯ ಅನುಮೋದನೆ ಮತ್ತು ಅನುಷ್ಠಾನಕ್ಕೆ ಒತ್ತಡ ಹೇರಲಾಗುತ್ತದೆ ಎಂದರು.
ಸಂಸದ ವೈ. ದೇವೇಂದ್ರಪ್ಪ ಅವರು, ಸಂಡೂರು ತಾಲೂಕಿನ ಜನರ ದಶಕಗಳ ಕನಸನ್ನು ನನಸಾಗಿಸಲು ಕೆರೆಗಳನ್ನು ಭರ್ತಿ ಮಾಡುವ ಯೋಜನೆಯ ಡಿಪಿಆರ್ ಸಿದ್ಧವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತ್ವರಿತವಾಗಿ ಯೋಜನೆ ಜಾರಿಗೆ ಅನುಮೋದನೆ ನೀಡಲಿದ್ದಾರೆ ಎಂದರು.
ನೀರಾವರಿ ಇಲಾಖೆ ಅಧಿಕಾರಿಗಳು ಈ ವರದಿಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ತ್ವರಿತವಾಗಿ ಸಲ್ಲಿಸಿ, ತಾಂತ್ರಿಕವಾಗಿ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.
ಬಿಜೆಪಿ ಸಂಡೂರು ತಾಲೂಕು ಅಧ್ಯಕ್ಷ ಜಿ.ಟಿ. ಪಂಪಾಪತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು..

ವರದಿ.ಪ್ರತಾಪ್, ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
