ಮೊಳಕಾಲ್ಮುರು: ಕಣ್ಣಕುಪ್ಪೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ಕವಿತ ಎಸ್ ಮನ್ನಿಕೇರಿ: ವಾಸ್ತವ್ಯಕ್ಕೆ ಸಿದ್ಧತೆ.!!

ವರದಿ.ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮದಲ್ಲಿ ಫೆ. 20 ರಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ವಾಸ್ತವ್ಯಕ್ಕೆ ಸಿದ್ಧತೆ ನಡೆಯುತ್ತಿದೆ. ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 135 ಕಿ.ಮೀ, ಮೊಳಕಾಲ್ಮೂರು ತಾಲೂಕು ಕೇಂದ್ರದಿಂದ 35 ಕಿ.ಮೀ ಹಾಗೂ ಪಕ್ಕದ ಆಂದ್ರಪ್ರದೇಶದಿಂದ ಕೇವಲ 2 ಕಿ.ಮೀ ಅಂತರದಲ್ಲಿರುವ, ಬಳ್ಳಾರಿ ಗಡಿಗೆ ತಾಗಿಕೊಂಡಿರುವ ಕಣಕುಪ್ಪೆ ಗ್ರಾಮದ ಮೂಲ ಸೌಕರ್ಯ ವಂಚಿತವಾಗಿದೆ. ಜಿಲ್ಲಾಧಿ ಕಾರಿಗಳ ವಾಸ್ತವ್ಯದ ಹಿನ್ನೆಲೆಯಲ್ಲಿ ಇಲ್ಲಿನ ಜನರಲ್ಲಿ ಹೊಸ ನಿರೀಕ್ಷೆಗಳು ಮೂಡಿವೆ. ಅಧಿಕಾರಿಗಳು ಗ್ರಾಮದ ಕಡೆ ಮುಖ ಮಾಡಿದ್ದಾರೆ. ಈ ಮೂಲಕ ಇಲ್ಲಿನ ಜನರ ವಿಧವಾ ವೇತನ, ವೃದ್ಧಾಪ್ಯ ವೇತನದಂತಹ ಅನೇಕ ಸಣ್ಣಪುಟ್ಟ ಸಮಸ್ಯೆಗಳಿಗೆ ಮುಕ್ತಿ ದೊರೆಯುವ ನಿರೀಕ್ಷೆ ಮೂಡಿದೆ. ಪರಿಶಿಷ್ಟ ಪಂಗಡದವರು, ಹಿಂದುಳಿದವರು ಸೇರಿದಂತೆ ಗ್ರಾಮದಲ್ಲಿ 114 ಕುಟುಂಬಗಳು, ಸುಮಾರು 638 ಜನಸಂಖ್ಯೆ ಇದೆ. ತಾಲೂಕಿನ ಅತ್ಯಂತ ಹಿಂದುಳಿದ ಕಣಕುಪ್ಪೆ ಗ್ರಾಮಕ್ಕೆ ಸಾರಿಗೆ, ವಸತಿ ಮತ್ತಿತರ ಪ್ರಮುಖ ಸಮಸ್ಯೆಗಳು ಬಾ ಧಿಸುತ್ತಿವೆ. ಮೊಳಕಾಲ್ಮೂರು ತಾಲೂಕು “ಮಳೆ ನೆರಳಿನ ಪ್ರದೇಶ’ ಎಂದೇ ಗುರುತಿಸಿಕೊಂಡಿದೆ.

ಇಲ್ಲಿ ಮಳೆಯಲ್ಲ, ಮಳೆಯ ನೆರಳು ಮಾತ್ರ ಬೀಳುತ್ತೆ ಎಂದು ರೈತರು ಹೇಳುತ್ತಾರೆ. ಮಳೆಯೇ ಇಲ್ಲದಿರುವಾಗ ಅಂತರ್ಜಲ ಕೇಳುವುದೇ
ಬೇಡ. ನದಿ ಮೂಲಗಳೂ ಇಲ್ಲ. ರೈತರು ಮಳೆ ನಂಬಿ ಕೃಷಿ ಮಾಡುತ್ತಿದ್ದು, ಸಕಾಲಕ್ಕೆ ಮಳೆಯಾದರೆ ನೆಮ್ಮದಿ. ಇಲ್ಲದಿದ್ದರೆ ಗಂಟು
ಮೂಟೆ ಕಟ್ಟಿಕೊಂಡು ಗುಳೆ ಹೋಗುವುದು ಅನಿವಾರ್ಯವಾಗಿದೆ. ಶೇಂಗಾ, ಜೋಳ, ಹತ್ತಿ, ಸಜ್ಜೆ, ನವಣೆ ಇಲ್ಲಿ ಬೆಳೆಯುವ ಬೆಳೆಗಳು. ಜೀವನೋಪಾಯಕ್ಕೆ ಬಹುತೇಕರು ನೆರೆಯ ಬಳ್ಳಾರಿ ನಗರದ ಕೈಗಾರಿಕೆಗಳಿಗೆ ಇಲ್ಲಿಂದ ಓಡಾಡುತ್ತಾರೆ. ಮಳೆ ಇಲ್ಲದೆ ಬೆಳೆ ಕೈ ಕೊಟ್ಟಾಗ ಪಾವತಿ ಮಾಡಿದ ವಿಮೆ ಕೂಡ ಇಲ್ಲಿನ ಜನರಿಗೆ ಸಿಗುತ್ತಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂಬುದು ರೈತರ ಬೇಸರ. ಕಣಕುಪ್ಪೆ ಗ್ರಾಮದಲ್ಲಿ ಅಂಗನವಾಡಿ ಹಾಗೂ 1 ರಿಂದ 7ನೇ ತರಗತಿವರೆಗೆ ಮಾತ್ರ ಕಲಿಯಲು ಅವಕಾಶವಿದೆ. ಗ್ರಾಮದಲ್ಲಿ 7 ತರಗತಿಗಳಲ್ಲಿ ಒಟ್ಟು 79 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಗೆ ಶುದ್ಧ ನೀರಿನ ಘಟಕ, ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ, ಶಾಲಾ ಕೊಠಡಿಗಳ ದುರಸ್ಥಿ ಹಾಗೂ ಕೊರತೆ ಇರುವ ಶಿಕ್ಷಕರನ್ನು ನೇಮಕ ಮಾಡಬೇಕಿದೆ. ಪ್ರೌಢಶಿಕ್ಷಣಕ್ಕೆ ಇಲ್ಲಿಂದ 4 ಕಿಮೀ ದೂರದಲ್ಲಿರುವ ತಮ್ಮೇನಹಳ್ಳಿಗೆ ಹೋಗಬೇಕಾಗಿದೆ.

ಪ್ರತಿ ದಿನ ಮಕ್ಕಳು 8 ಕಿಮೀ ನಡೆದು ಪ್ರೌಢಶಾಲೆಗೆ ಹೋಗಿ ಬರಬೇಕಾಗಿದೆ. ಈ ಕಾರಣದಿಂದ ಗ್ರಾಮದ ಸಾಕಷ್ಟು ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬಳ್ಳಾರಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ ಎನ್ನುವ ಮಾಹಿತಿಯೂ ಇದೆ. ಗ್ರಾಮದೊಳಗೆ ಸಿಸಿ ರಸ್ತೆಗಳಿವೆ. ಆದರೆ ಚರಂಡಿ ನೀರು ಹರಿಯಲು ಚರಂಡಿಗಳೇ ಇಲ್ಲ. ಪರಿಣಾಮ ಬಚ್ಚಲು ಮನೆಯ ನೀರು ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆಯಲ್ಲಿ ಕೊಳಚೆ ಹರಿಯುವುದರಿಂದ ದುರ್ವಾಸನೆ ಇದೆ. ಈ ಊರಿನವರು ಪಡಿತರ ಪಡೆಯಲು ಪಕ್ಕದ ತಮ್ಮೇನಹಳ್ಳಿಗೆ ನಡೆದು ಹೋಗಬೇಕು ಅಥವಾ ಸಿಕ್ಕಿದ ವಾಹನ ಹಿಡಿದು ಹೋಗಬೇಕಾಗಿದೆ. ಈ ಗ್ರಾಮದ ವಸತಿ ರಹಿತರಿಗಾಗಿ ವಸತಿ ಸೌಲಭ್ಯಕ್ಕೆ ಕಲ್ಪಿಸಿರುವ ಅನುದಾನ ಕಡಿತವಾಗಿದೆ. ಇದರಿಂದ ಸೂರಿಲ್ಲದೆ ತಾತ್ಕಾಲಿಕ ಶೆಡ್‌ ನಿರ್ಮಾಣ ಮಾಡಿಕೊಂಡು ಸಂಕಷ್ಟದಲ್ಲಿ ಬದುಕುವ ಸ್ಥಿತಿ ಇದೆ. ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲದ್ದರಿಂದ ರಾಂಪುರ ಗ್ರಾಮಕ್ಕೆ ತೆರಳಬೇಕಾಗಿದೆ. ಜಿಲ್ಲಾ ಧಿಕಾರಿಗಳು ಈ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡುತ್ತಾರಾ ಎಂಬುದು ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಗೊತ್ತಾಗಲಿದೆ. ತಮ್ಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕಣಕುಪ್ಪೆ ಗ್ರಾಮದಲ್ಲಿ ಜಿಲ್ಲಾ ಧಿಕಾರಿಗಳ ವಾಸ್ತವ್ಯದ ಹಿನ್ನೆಲೆಯಲ್ಲಿ ಒಂದು ವಾರ ಮೊದಲೇ ಕಂದಾಯ ಇಲಾಖೆಯಿಂದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಈಗಾಗಲೇ ತಾಲೂಕು ಮಟ್ಟದ ಇಲಾಖಾ ಅ ಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ ಗ್ರಾಮದಲ್ಲಿ ಆಗಬೇಕಾದ ಕೆಲಸ, ವಾಸ್ತವ್ಯದ ಸಿದ್ಧತೆ ನಡೆಸಲಾಗುತ್ತಿದೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend