ಕೆರೆಯಲ್ಲಿ ಈಜಲು ಹೋಗಿದ್ದ ತಾತ-ಮೊಮ್ಮಗ ನೀರುಪಾಲು…
ಸಂಡೂರು, ಜೂನ್ 6: ತಾಲೂಕಿನ ಬೊಮ್ಮಘಟ್ಟ ಗ್ರಾಮದಿಂದ ಬುಡ್ಡೆನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಮಾರ್ಗದಲ್ಲಿರುವ ಹುಲಕುಂಟೆ ಕೆರೆಯಲ್ಲಿ ಈಜಲು ಹೋಗಿದ್ದ ತಾತ ಹಾಗೂ ಮೊಮ್ಮಗ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತರನ್ನು ಬುಡ್ಡೆನಹಳ್ಳಿ ಗ್ರಾಮದ ಪಾಂಡುರಂಗಪ್ಪ (56) ಹಾಗೂ ಅವರ ಮೊಮ್ಮಗ ಪವನ್ ಕುಮಾರ್ (8) ಎಂದು ಗುರುತಿಸಲಾಗಿದೆ. ಇವರು ಬೊಮ್ಮಘಟ್ಟ ಗ್ರಾಮದಲ್ಲಿ ವಾಸವಾಗಿದ್ದರು.
ಮಾಹಿತಿಯ ಪ್ರಕಾರ, ಹುಲಕುಂಟೆ ಕೆರೆಯ ಸಮೀಪದಲ್ಲೇ ಇವರ ತೋಟವಿದ್ದು, ತೋಟದ ಕೆಲಸಕ್ಕಾಗಿ ತೆರಳಿದ್ದ ವೇಳೆ ಇಬ್ಬರೂ ಕೆರೆಯಲ್ಲಿ ಈಜಲು ಇಳಿದಿದ್ದಾರೆ. ಈ ಸಂದರ್ಭದಲ್ಲಿ ಆಳವಾದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ತಾತ-ಮೊಮ್ಮಗ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮೇಳೈಸಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
