ಸಂಸದರಿಂದ ಪ್ರಗತಿ ಪರಿಶೀಲನಾ ದಿಶಾ ಸಭೆ
ಕುಡಿಯುವ ನೀರಿನ ಕೆರೆಗಳ ನಿರ್ಮಾಣದಲ್ಲಿ ಗುಣಮಟ್ಟದ ಕೊರತೆಯಿಂದ ಸೋರಿಕೆ, ಪರೀಕ್ಷೆಯಲ್ಲಿ ದೃಢ; ವೈ.ದೇವೇಂದ್ರಪ್ಪ
ಬಳ್ಳಾರಿ, : ಜನರಿಗೆ ಶುದ್ದ ಕುಡಿಯುವ ನೀರು ಒದಗಿಸಲು ಮೋಕಾ, ಅಲ್ಲೀಪುರದಲ್ಲಿ ನಿರ್ಮಿಸಲಾದ ಕೆರೆ ನಿರ್ಮಾಣದಲ್ಲಿ ಗುಣಮಟ್ಟದ ಕೊರತೆಯಿಂದ ಸೋರಿಕೆಯಾಗುತ್ತಿದ್ದು ಪರೀಕ್ಷೆಯಲ್ಲಿಯು ಇದು ದೃಢಪಟ್ಟಿದೆ ಎಂದು ಸಂಸದರಾದ ವೈ.ದೇವೇಂದ್ರಪ್ಪನವರು ಅಧಿಕಾರಿಗಳಿಗೆ ಪರಿಶೀಲಿಸಲು ಸೂಚನೆ ನೀಡಿದರು.
ಅವರು ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾದ ಜಿಲ್ಲಾ ಅಭಿವೃದ್ದಿ ಮತ್ತು ಮೇಲ್ವಿಚಾರಣಾ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನರಿಗೆ ಶುದ್ದ ಕುಡಿಯುವ ನೀರು ಒದಗಲಿಸಲು ನೀರಿನ ಸಂಗ್ರಹಣೆಗಾಗಿ ಸುಮಾರು 7070 ಲಕ್ಷ ಅನುದಾನದಲ್ಲಿ ಕೆರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೆರೆಗಳಿಗೆ ಪ್ಲಾಸ್ಟಿಕ್ ಹಾಕಲಾಗುತ್ತಿದ್ದು ಮತ್ತು ಸುಣ್ಣದ ಮಣ್ಣು ಇದರಿಂದ ಸೋರಿಕೆಯಾಗುತ್ತಿದೆ. ನಮ್ಮ ಕಾಲದಲ್ಲಿ ಪ್ಲಾಸ್ಟಿಕ್ ಬಳಕೆ ಇರಲಿಲ್ಲ, ಆವಾಗ ಇಂತಹ ಸಮಸ್ಯೆ ಬರುತ್ತಿರಲಿಲ್ಲ. ಸೋರಿಕೆ ಬಗ್ಗೆ ಮೂರು ಪರೀಕ್ಷಾ ವರದಿಗಳು ಬಂದಿದ್ದು ಕಾಮಗಾರಿ ಕಳಪೆ ಎಂದು ದೃಢಪಟ್ಟಿದ್ದು ಇದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೀನ್ಸ್ ಹೊಲಿಗೆ ತರಬೇತಿಗೆ ಒತ್ತು; ಬಳ್ಳಾರಿಯಲ್ಲಿ ಜೀನ್ಸ್ ಉದ್ಯಮ ಹೆಚ್ಚು ಬೆಳೆಯುತ್ತಿದ್ದು ಇದಕ್ಕೆ ಬೇಡಿಕೆಯು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಜೀನ್ಸ್ ಹೊಲಿಗೆ ತರಬೇತಿಯನ್ನು ಕೌಶಲ್ಯಾಭಿವೃದ್ದಿ ಇಲಾಖೆಯಿಂದ ಕೈಗೊಳ್ಳಬೇಕಾಗಿದೆ. ಈಗಾಗಲೇ ಬಳ್ಳಾರಿಯಲ್ಲಿ ಜೀನ್ಸ್ಗೆ ಸಾಕಷ್ಟು ಮಾರುಕಟ್ಟೆ ಬೇಡಿಕೆ ಇದ್ದು ಇದಕ್ಕೆ ಉತ್ತೇಜನ ನೀಡುವುದರಿಂದ ಇಲ್ಲಿನ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸಲಿದ್ದು ಇಲಾಖೆ ಕಾರ್ಯಕ್ರಮಗಳ ಜೊತೆಗೆ ಡಿಎಂಎಫ್ ನಿಧಿಯಡಿಯು ತರಬೇತಿಗೆ ಕ್ರಮವಹಿಸಲು ಕೌಶಲ್ಯಾಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ನಿಂದ ಮೃತ ಕುಟುಂಬದವರಿಗೆ ಉದ್ಯೋಗ; ಕೋವಿಡ್ ನಿಂದ ಜಿಲ್ಲೆಯಲ್ಲಿ 892 ಜನರು ಮೃತರಾಗಿದ್ದು ಇವರೆಲ್ಲರಿಗೂ ಪರಿಹಾರ ವಿತರಿಸಲಾಗಿದೆ. ಕೋವಿಡ್ನಿಂದ ಮೃತರಾದ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಹೊರಗುತ್ತಿಗೆಯಡಿ ಉದ್ಯೋಗ ನೀಡುವಾಗ ಆದ್ಯತೆ ಮೇರೆಗೆ ಪರಿಗಣಿಸಲು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸಂಸದರು ತಿಳಿಸಿ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಇದನ್ನು ಪರಿಗಣಿಸಲು ತಿಳಿಸಿದರು.
ಬಿತ್ತ ಸುಗ್ಗಿಯೊಳಗೆ ರಸ್ತೆ ಸರಿಪಡಿಸಿ; ಕೆಲವೇ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಮತ್ತು ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ನಡೆಯಲಿದ್ದು ರಸ್ತೆಯಲ್ಲಿ ಗುಂಡಿಗಳು ಕಂಡಲ್ಲಿ ಸಹಜವಾಗಿ ಆರೋಪ, ಪ್ರತ್ಯಾರೋಪ ಮಾಡುವುದು ಸಹಜವಾಗುತ್ತದೆ. ಮುಂದೆ ಬಿತ್ತ ಸುಗ್ಗಿ ಚುನಾವಣೆ ಬರಲಿದ್ದು ಅಷ್ಟರೊಳಗಾಗಿ ಅನುಮೋದನೆಯಾಗಿರುವ ರಸ್ತೆಗಳ ಅಭಿವೃದ್ದಿ ಜೊತೆಗೆ ಹಾಲಿ ಇರುವ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಅಧಿಕಾರಿಗಳು ಮಾಡಿಸÀಬೇಕು. ಬಳ್ಳಾರಿ-ಹೊಸಪೇಟೆ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಿದ್ದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅಧೀನ ಅಧಿಕಾರಿಗೆ ತಾಕೀತು ಮಾಡಿದ ಸಂಸದರು ಸಭೆಗೆ ಗೈರಾದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಮೇಲೆ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಲು ಸೂಚನೆ ನೀಡಿದರು.

ಅಲ್ಕುಂದಿ ಗ್ರಾಮದಲ್ಲಿ ವಿದ್ಯುತ್ ಕಂಬ ಅಳವಡಿಕೆಗೆ ಸೂಚನೆ; ಅಲ್ಕುಂದಿ ಗ್ರಾಮದಲ್ಲಿ ವಿದ್ಯುತ್ ಮೀಟರ್ಗಳಿದ್ದು ಕಂಬಗಳನ್ನು ಹಾಕದಿರುವುದರಿಂದ ಕಟ್ಟಿಗೆಯ ಗೂಟದ ಮೇಲೆ ವೈರ್ಗಳನ್ನು ತೆಗೆದುಕೊಂಡು ಹೋಗುವಂತಾಗಿದೆ ಎಂದು ದಿಶಾ ಸಮಿತಿ ಸದಸ್ಯರು ಪ್ರಸ್ತಾಪಿಸಿದಾಗ ಜೆಸ್ಕಾಂ ಇಂಜಿನಿಯರ್ ಅಭಿವೃದ್ದಿ ಶುಲ್ಕ ಭರಿಸಿದಲ್ಲಿ ಮಾತ್ರ ವಿದ್ಯುತ್ ಕಂಬ ಹಾಕಲು ಅವಕಾಶ ಇದೆ. ಇದಕ್ಕೆ ಅಂದಾಜು 14 ಲಕ್ಷ ಯೋಜನಾ ವೆಚ್ಚವಾಗಲಿದ್ದು ಇದನ್ನು ಭರಿಸಿದಲ್ಲಿ ಮಾತ್ರ ಹಾಕಲಾಗುತ್ತದೆ ಎಂದಾಗ ಕೇಂದ್ರ ಸರ್ಕಾರದ ಬೆಳಕು ಯೋಜನೆಯಡಿ ಇದನ್ನು ಸೇರಿಸಿಕೊಂಡು ಗ್ರಾಮದ ಬಡ ಜನರಿಗೆ ವಿದ್ಯುತ್ ಕಂಬ ಹಾಕಿಕೊಡಲು ಸಂಸದರು ಸೂಚನೆ ನೀಡಿದರು.
ಉದ್ಯೋಗ ಖಾತರಿಯಲ್ಲಿ ಶೇ 110 ರಷ್ಟು ಸಾಧನೆ; ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ಪ್ರಸ್ತಕ ಸಾಲಿನಲ್ಲಿ 45.13 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯಲ್ಲಿ 49.56 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ 110 ರಷ್ಟು ಸಾಧನೆ ಮಾಡಲಾಗಿದೆ. ಇದಕ್ಕಾಗಿ 135 ಕೋಟಿ ಕೂಲಿಗೆ ಮತ್ತು 38.56 ಕೋಟಿ ಸಾಮಗ್ರಿಗಳ ವೆಚ್ಚ ಸೇರಿದಂತೆ 173.73 ಕೋಟಿ ವೆಚ್ಚ ಮಾಡಲಾಗಿದ್ದು ಜಿಲ್ಲೆ ಉತ್ತಮ ಸಾಧನೆ ಮಾಡಿದೆ ಎಂದರು.
ಸಭೆಯಲ್ಲಿ ನರೇಗಾ ಯೋಜನೆಯಡಿ ಪ್ರಗತಿಪರ ಸಾಧನೆಗೈದು, ರಾಜ್ಯ ಮಟ್ಟದ ಶ್ರಮಾ ಚೇತನಾ ಪ್ರಶಸ್ತಿಗೆ ಭಾಜನರಾದ ಲಿಂಗತ್ವ ಅಲ್ಪಸಂಖ್ಯಾತರಾದ ಅಂಜಿನಮ್ಮ ಹಾಗೂ ಮಂಜಮ್ಮ ಅವರಿಗೆ ಸನ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಿಂಗಮೂರ್ತಿ, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು…

ವರದಿ. ವಿರೇಶ್. ಎಚ್. ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
