ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಕೂಲಿ ಕಾರ್ಮಿಕರೊಬ್ಬರಿಗೆ ದಿನಕ್ಕೆ ₹ 300 ಕೊಟ್ಟು ಶೇಂಗಾ ಕಳೆ ತೆಗೆಸಿದ್ದೇನೆ ಸ್ವಾಮಿ. ಕಳೆ ತೆಗೆಸಿದ ನಂತರ ಮಳೆ ಕೈಕೊಟ್ಟು ಕೂಲಿ ಹಣವೂ ವಾಪಸ್ ಬಾರದಂತಾಗಿದೆ. ಇನ್ನು ಬಿತ್ತನೆಬೀಜ, ಬಿತ್ತನೆ ಖರ್ಚು ನಮ್ಮ ನೆತ್ತಿ ಮೇಲೆ ಬರುತ್ತಿದೆ. ಈ ವರ್ಷ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಮಳೆಯಾಶ್ರಿತ ಶೇಂಗಾ ಬೆಳೆಗಾರರ ನೋವು. ಮಳೆ ಈ ವರ್ಷ ಬಿತ್ತನೆ ಸಮಯಕ್ಕೆ ಸರಿಯಾಗಿ ಬಂದಿತೆಂದು ಖುಷಿಯಿಂದ ದುಬಾರಿಯಾದರೂ ಪ್ರತಿ ಕ್ವಿಂಟಲ್ಗೆ ₹ 9,000ದಂತೆ ಬೀಜ ಖರೀದಿಸಿ ಬಿತ್ತನೆ ಮಾಡಿದೆವು.
ಒಂದು ಜೋಡಿ ನೇಗಿಲು ಬಿತ್ತನೆಗೆ ರೂ ₹ 2,500 ನೀಡಿದ್ದೇವೆ. ಎಡೆ ಹಾಕಿಸಿದ್ದೇವೆ, ಕಳೆ ತೆಗೆಸಿದ್ದೇವೆ. ಎಲ್ಲಾ ಸೇರಿ ಎಕರೆಗೆ ಅಂದಾಜು ₹ 11 ಸಾವಿರ ಖರ್ಚು ಮಾಡಿದ್ದೇವೆ. ಅಕಾಲಿಕ ಮಳೆಯಿಂದಾಗಿ ಬೆಳೆ ಬುಡ ಕೊಳೆರೋಗಕ್ಕೆ ತುತ್ತಾಗಿದೆ. ಇದಕ್ಕೂ ಮುಂಚೆ ಮಳೆ ಇಲ್ಲದೇ ಗಿಡ ಒಣಗಿರುವುದು ಹಾನಿಗೆ ಒತ್ತು ನೀಡಿದೆ’ ಎಂದು ರೈತ ರಾಯಾಪುರದ ನಾಗೇಂದ್ರಣ್ಣ ಅಳಲು ತೋಡಿಕೊಂಡರು. ತಿಪ್ಪೇಸ್ವಾಮಿ, ಮೊಗಲಹಳ್ಳಿ ಬೆಳೆಗೆ ಬೇಕಿದ್ದಾಗ ಬರಬೇಕಿದ್ದ ಮಳೆ, ಬೇಕಿಲ್ಲದಾಗ ಸಾಕೆನಿಸುವಷ್ಟು ಸುರಿದ ಕಾರಣ ಹೊಲದಲ್ಲಿನ ಶೇಂಗಾ ಗಿಡಗಳನ್ನು ಕೈಯಲ್ಲಿ ಹಿಡಿದರೆ ಪುಡಿ ಪುಡಿಯಾಗುತ್ತವೆ. ಎಲೆ ಉದುರಿ ನೆಲಕ್ಕೆ ಬಿದ್ದು ಕೊಳೆತುಹೋಗಿವೆ ಎಂದರು.
ಗೌರಸಮುದ್ರ ಮಾರಮ್ಮದೇವಿ ದೊಡ್ಡಪರಿಷೆಯಲ್ಲಿ ಬೆಳೆ ಕಂಗೊಳಿಸುತ್ತಿದ್ದವು. ಜಾತ್ರೆ ನಂತರ ಕೈಕೊಟ್ಟ ಮಳೆ ಮರಿಪರಿಷೆ ತನಕ ಬರಲಿಲ್ಲ. ಹೂಡು ಇಳಿಯಬೇಕಾಗಿದ್ದ ಗಿಡ ಒಣಗಿ ನಿಂತಿವೆ. ಮುಂಚೆ ಇಳಿದಿದ್ದ ಹೂಡುಗಳು ಸಣ್ಣ ಕಾಯಿಯಾಗಿ ಸೊರಗಿವೆ. ಈಗ ಮಳೆ ಬಂದಿರುವುದು ಒಣಗುತ್ತಿದ್ದ ಬಳ್ಳಿ ಮತ್ತು ಸೊರಗಿದ್ದ ಕಾಯಿಯನ್ನು ಕೊಳೆಸುತ್ತಿದೆ. ಇದರಿಂದ ದನಕರುಗಳ ಬಾಯಿಗೆ ಮಣ್ಣು ಬಿದ್ದಂಗಾಗಿದೆ’ ಎಂದು ಮಾರಮ್ಮನಹಳ್ಳಿಯ ದುರುಗಪ್ಪ ಬೇಸರ ಹೊರಹಾಕಿದರು. ಸೆಪ್ಟಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ 84ರಷ್ಟು ಮಳೆ ಕೊರತೆಯಾಗಿದೆ. ಹಾನಿ ಪ್ರಮಾಣ ಶೇ 75ಕ್ಕೂ ಹೆಚ್ಚು ಎಂದು ಅಂದಾಜಿಸಿ ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಶೇಂಗಾಕ್ಕೆ ಹೂಡು ಇಳಿಯುವ ಮತ್ತು ಕಾಯಿ ಕಟ್ಟುವ ವೇಳೆ ಹೆಚ್ಚು ಮಳೆ ಬೇಕು. ಈ ವರ್ಷ ಇದಕ್ಕೆ ತದ್ವಿರುದ್ಧವಾಗಿ ಬೆಳೆ ಬಹುತೇಕ ಕೈಬಿಟ್ಟು ಹೋಗಿದೆ’ ಎಂದು ತಾಲ್ಲೂಕು ಕೃಷಿ ಅಧಿಕಾರಿ ಡಾ.ವಿ.ಸಿ. ಉಮೇಶ್ ತಿಳಿಸಿದರು…

ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
