ನಾಯಕನಹಟ್ಟಿ: ಬ್ಯಾಂಕ್‌ನಲ್ಲಿ ರೈತರು ಅಡ ಇಟ್ಟಿರುವ ಬಂಗಾರದ ಒಡವೆಗಳ ಹರಾಜು ಪ್ರಕ್ರಿಯೆ ಮುಂದೂಡಬೇಕೆಂದು ಪ್ರತಿಭಟನೆ.!

ಚಿತ್ರದುರ್ಗ: ನಾಯಕನಹಟ್ಟಿ ಪಟ್ಟಣದ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಬ್ಯಾಂಕ್‌ನಲ್ಲಿ ರೈತರು ಅಡ ಇಟ್ಟಿರುವ ಬಂಗಾರದ ಒಡವೆಗಳ ಹರಾಜು ಪ್ರಕ್ರಿಯೆ ಮುಂದೂಡಬೇಕೆಂದು ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಪಟ್ಟಣದ ಕೆನರಾ ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಲಾಯಿತು.

ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ. ಮುದಿಯಪ್ಪ ಮಾತನಾಡಿ, ಸತತ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ರೈತರಿಗೆ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆತಿಲ್ಲ. ಹೀಗಾಗಿ ರೈತರು ಭಾರೀ ಪ್ರಮಾಣದ ನಷ್ಟದಲ್ಲಿದ್ದಾರೆ. ಜತೆಗೆ ನಾಯಕನಹಟ್ಟಿ ಹೋಬಳಿಯಲ್ಲಿ ಪ್ರಮುಖ ಬೆಳೆಯಾದ ಶೇಂಗಾ ಮಳೆಯಿಲ್ಲದೆ ಸಂಪೂರ್ಣವಾಗಿ ನಷ್ಟವಾಗಿದೆ. ರೈತರಿಗೆ ಬಿತ್ತಿದ ಬೀಜವೂ ದೊರೆಯದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ಗಳು ಅಡ ಇಟ್ಟಿರುವ ಒಡವೆಗಳನ್ನು ಹರಾಜು ಮಾಡಿ ರೈತರನ್ನು ಬೀದಿಗೆ ತಳ್ಳುತ್ತಿವೆ. ರೈತರ ಬಗ್ಗೆ ಮೃದು ಧೋರಣೆ ತಳೆಯಬೇಕು, ಸಾಲ ಮರು ಪಾವತಿಗೆ ಕೆಲವು ತಿಂಗಳುಗಳ ಕಾಲ ಅವಕಾಶ ನೀಡಬೇಕೆಂದು ಒಂದೆರಡು ದಿನಗಳ ಹಿಂದೆ ಬ್ಯಾಂಕ್‌ಗೆ ಮನವಿ ಸಲ್ಲಿಸಲಾಗಿದೆ ಎಂದರು.

ಮನವಿ ಸ್ವೀಕರಿಸಿದ ಕೆನರಾ ಬ್ಯಾಂಕ್‌ ಶಾಖಾ ವ್ಯವಸ್ಥಾಪಕ ಸೂರ್ಯದೇವ ನಾಯಕ್‌ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ರೈತರು ಸಾಲವನ್ನು ನವೀಕರಿಸಿಲ್ಲ ಹಾಗೂ ಬ್ಯಾಂಕ್‌ಗೆ ಬಡ್ಡಿಯನ್ನೂ ಪಾವತಿಸಿಲ್ಲ. ಈ ಬಗ್ಗೆ ಹಲವಾರು ಬಾರಿ ನೋಟಿಸ್‌ ನೀಡಲಾಗಿದೆ. ಹರಾಜು ಪ್ರಕ್ರಿಯೆಗೆ ಒಳಪಟ್ಟ ರೈತರು ಲಿಖೀತವಾಗಿ ಅರ್ಜಿ ನೀಡಿಲ್ಲ. ಹೀಗಾಗಿ ಹರಾಜು ಪ್ರಕ್ರಿಯೆ ಮುಂದೂಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಪ್ರತಿಭಟನೆಯಲ್ಲಿ ಪಪಂ ಸದಸ್ಯರಾದ ಬಸಣ್ಣ, ಮನ್ಸೂರ್‌, ಹೋರಾಟ ಸಮಿತಿಯ ಬೋರಸ್ವಾಮಿ, ವಕೀಲ ನಾಗೇಂದ್ರಪ್ಪ, ಆರ್‌. ಪಾಲಯ್ಯ, ಓಬಣ್ಣ, ಡಿ. ಚೌಡಪ್ಪ, ತಿಪ್ಪೇಸ್ವಾಮಿ, ಕೋಲಮ್ಮನಹಳ್ಳಿ ಬಸವರಾಜ್‌, ಮಂಜುನಾಥ್‌, ಮೊಹಮ್ಮದ್‌, ಎಚ್‌.ಡಿ. ತಿಪ್ಪೇಸ್ವಾಮಿ, ಮಹಾಂತೇಶ್‌ ಮತ್ತಿತರರು ಭಾಗವಹಿಸಿದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend